ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಮಿಕ್ಕು ಅವರಿಗೆ ಲೆಕ್ಕಕ್ಕೆ ಕಡೆಯಿಲ್ಲದೆ ಮಾಡಿ,
ಹೊಕ್ಕು ಭಕ್ತಿಯಲ್ಲಿ, ಲೆಕ್ಕ ತಪ್ಪದೆ ಅವತಾರದಲ್ಲಿ ಬಂದು,
ಮತ್ರ್ಯಕ್ಕೆ ಬಸವೇಶ್ವರನೆಂಬ ಗಣನಾಥನಾಮಮಂ ಪಡೆದು,
ಭಕ್ತರಿಗೆ ಮುಖ್ಯವಾಗಿ ಭಕ್ತಿಯಂ ತೋರಿ,
ಸತ್ಯದ ಬಟ್ಟೆಯಂ ಕಾಣದೆ, ಚಿದ್ಘನಲಿಂಗವ ಹೊಗಲರಿಯದೆ,
ಬದ್ಧಕತನವನು ಸುಬದ್ಧವ ಮಾಡದೆ,
ಶುದ್ಧಶೈವ ಕಪ್ಪಡಿಯ ಸಂಗಮನಾಥನಲ್ಲಿ,
ಐಕ್ಯವಾದ ಚಿದ್ರೂಪ ಚಿತ್ಪ್ರಕಾಶಘನಲಿಂಗ,
ಕೈಯಲ್ಲಿದ್ದಂತೆ ಹೊದ್ದಿದನೇಕರುದ್ರಮೂರ್ತಿಯಲ್ಲಿ.
ರಜತಾದ್ರಿಯಲಿರ್ದು ಸುಬದ್ಧವಾಗಿ ಪ್ರಳಯವಾಗಿತ್ತು ರುದ್ರಲೋಕವೆಲ್ಲಾ.
ರುದ್ರಗಣಂಗಳೆಲ್ಲರೂ ಮರ್ದನಂಗೆಯ್ದಲ್ಲಿ,
ಸುದ್ದಿಯ ಹೇಳುವರನಾರನೂ ಕಾಣೆ.
ಇನ್ನಿದ್ದವರಿಗೆ ಬುದ್ಧಿ ಇನ್ನಾವುದೊ ?
ಶುದ್ಧಶೈವವ ಹೊದ್ದದೆ, ಪೂರ್ವಶೈವವನಾಚರಿಸದೆ,
ಮಾರ್ಗಶೈವವ ಮನ್ನಣೆಯ ಮಾಡದೆ, ವೀರಶೈವವನಾರಾಧಿಸದೆ,
ಆದಿಶೈವವನನುಕರಿಸದೆ, ಭೇದಿಸಬಾರದ ಲಿಂಗ ಕರದಲ್ಲಿದ್ದು,
ಕಂಗಳಿನಲ್ಲಿ ನಿಂದು, ಮನದಲ್ಲಿ ಸಿಂಹಾಸನಂಗೆಯ್ದು,
ಸಕಲೇಂದ್ರಿಯವ ಮರೆದು,
ಕಾಯಜೀವನ ಹೊಲಿಗೆಯ ಬಿನ್ನಾಣದಿಂ ಬಿಚ್ಚಿ,
ಬೇರೊಂದರಸಲಿಲ್ಲವಾಗಿ ಬಯಕೆಯರತು,
ಭವಹಿಂಗಿ, ತಾನೆನ್ನದೆ ಇದಿರೆನ್ನದೆ, ಏನೂ ಎನ್ನದ ಲಿಂಗೈಕ್ಯಂಗೆ
ಸ್ವಾನುಭಾವದಿಂದ ನಮೋ ನಮೋ [ಎಂಬೆ ]
ನಿಃಕಳಂಕ ಮಲ್ಲಿಕಾರ್ಜುನಾ.