ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ,
ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ.
ಅಂಗುಷ*ದಲ್ಲಿ ಸರ್ಪದಷ್ಟವಾದಡೆ,
ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ.
ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ.
ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ,
ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ.
ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ.
ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ.
ಸ್ವಯಂಜ್ಯೋತಿಯ ಬೆಳಗುಳ್ಳವಂಗೆ,
ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ.
ವಾಯುಗಮನವುಳ್ಳವಂಗೆ ತೇಜಿಯನರಸುವಂತೆ.
ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ.
ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ.
ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ,
ಮೂರರ ಗುಣದಲ್ಲಿ ಮುಕ್ತಿಯೆಂಬ,
ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ,
ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು,
ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ,
ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.