ಭಕ್ತನ ಭಕ್ತಿ, ಮಹೇಶ್ವರನ ಮಾಹೇಶ, ಪ್ರಸಾದಿಯ ಪ್ರಸಾದಿ,
ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯವೆಂಬಲ್ಲಿ
ದೃಷ್ಟವಾವುದು ಹೇಳಿರಣ್ಣಾ ?
ಘಟ ಬಿದ್ದಲ್ಲಿ ಆತ್ಮನೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಭಕ್ತನ ಭಕ್ತಸ್ಥಲ.
ಕೆಚ್ಚಲ ಕೊಯಿದು ಹಿಕ್ಕಿದಲ್ಲಿ ಅಮೃತವಿಪ್ಪೆಡೆಯ ಬಲ್ಲಡೆ,
ಮಹೇಶ್ವರನ ಮಾಹೇಶ್ವರಸ್ಥಲ.
ಇಂಗಳ ಕೆಡಿಸಿ ನಂದಿದಲ್ಲಿ ಆ ವಹ್ನಿಯ ಅಂಗವೆಲ್ಲಿ ಅಡಗಿತ್ತು
ಎಂಬುದನರಿದಲ್ಲಿ, ಪ್ರಸಾದಿಯ ಪ್ರಸಾದಿಸ್ಥಲ.
ರತ್ನದ ಶಿಲೆ ಒಡೆದು ಪುಡಿಯಾದಲ್ಲಿ ರತಿಯೆಲ್ಲಿ ಅಡಗಿತ್ತು
ಎಂಬುದನರಿದಲ್ಲಿ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ.
ವಾಸನೆಯ ಕುಸುಮವ ಹೊಸೆದು ವಾಸನೆ ಹೋಗಿ,
ಆ ಸುವಾಸನೆ ಅಡಗಿತ್ತೆಂಬುದನರಿದಲ್ಲಿ, ಶರಣನ ಶರಣಸ್ಥಲ.
ಅನಲ ಆಹುತಿಗೊಂಡು ಬೇವಲ್ಲಿ ಆ ಭಾವವ ಭಾವಿಸಬಲ್ಲಡೆ, ಐಕ್ಯನ ಐಕ್ಯಸ್ಥಲ.
ಇಂತೀ ಆರು ಸ್ಥಲದ ಭೇದವನರಿತು, ಮೂರು ಆರಾದ ಉಭಯವ ಕಂಡು,
ಇಂತೀ ಆರರೊಳಗೆ ಆರಾದ ಭೇದವ ಭಾವಿಸಿ ತಿಳಿದು,
ಮುಕುರದೊಳಗಣ ಬಿಂಬವ ಪ್ರತಿಬಿಂಬಿಸಿ ಕಾಬುದು,
ಒಂದೋ, ಎರಡೋ ? ಎಂಬುದ ತಿಳಿದಲ್ಲಿ, ಸರ್ವಸ್ಥಲ ಸಂಪೂರ್ಣ.
ಆತ ಸರ್ವಾಂಗಲಿಂಗಿ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.