ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ.
ಲಿಂಗಕ್ಕೆ ಜಂಗಮ ವಿಶೇಷವೆಂದು,
ಆ ಜಂಗಮದ ಪಾದೋದಕದಲ್ಲಿ ಮಜ್ಜನಂಗೆಯ್ದು,
ಪ್ರಸಾದದಿಂದ ಸಮರ್ಪಣವ ಮಾಡಿ,
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ
ಲಿಂಗ ಪ್ರಾಣ ಜಂಗಮವೆಂದು ಮಾಡಿ,
ಮತ್ತಾ ಜಂಗಮ ಮನೆಗೆ ಬಂದಡೆ ಸಂದೇಹವ ಮಾಡಲೇಕೆ?
ತನ್ನ ಪ್ರಾಣ ಲಿಂಗವೆಂದರಿದು,
ಲಿಂಗದ ಪ್ರಾಣ ಜಂಗಮವೆಂದರಿದು,
ಉಭಯಪ್ರಾಣ ತತ್ಪ್ರಾಣವಾದ ಮತ್ತೆ,
ಭಕ್ತಿಗೆ ಅವಿಶ್ವಾಸವಾಗಲೇಕೆ ?
ಆ ಜಂಗಮ ಹೆಣ್ಣ ಬೇಡಿದಡೆ ಆಶಕನೆಂದು,
ಮಣ್ಣ ಬೇಡಿದಡೆ ಬದ್ಧನೆಂದು,
ಹೊನ್ನ ಬೇಡಿದಡೆ ಸಂಸಾರಿಯೆಂದು ಇಷ್ಟನೆಂದ ಮತ್ತೆ,
ಭಕ್ತಿಯ ವಾಸಿಗೆ ಹೋರಲೇಕೆ ?
ಎಷ್ಟು ಕಾಲ ಮಾಡಿದ ದ್ರವ್ಯ ಸವೆದಡೆ, ಭಕ್ತಿಗೆ ಸಲ್ಲ, ಮುಕ್ತಿ ಇಲ್ಲ.
ವಿಶ್ವಾಸಹೀನಂಗೆ ಸತ್ಯಭಕ್ತಿ ಹುಸಿಯೆಂದೆ,
ನಿಃಕಳಂಕ ಮಲ್ಲಿಕಾರ್ಜುನಾ.