ಎನ್ನ ಪ್ರಾಣನೊಳಗೆ ಹೂಳಿರ್ದ ಪರಮಕಳೆಯ ತೆಗದು ಶಿವಲಿಂಗಮೂರ್ತಿಯ ಮಾಡಿ ಎನ್ನ ಕರಸ್ಥಲಕ್ಕೆ ಕೊಟ್ಟನಯ್ಯ ಶ್ರೀಗುರು. ಆ ಲಿಂಗವು ಸರ್ವಾವಸ್ಥೆಯಲ್ಲಿಯು ಅಂಗವ ಬಿಟ್ಟು ಅಗಲಲಾಗದುಯೆಂದು ನಿರೂಪಿಸಿದನಯ್ಯ ಶ್ರೀಗುರು. ಇದು ಕಾರಣ, ಅಂಗವ ಬಿಟ್ಟು ಲಿಂಗ ನಿಮಿಷಾರ್ಧವಗಲಿದಡೆ, ನಾಯಕನರಕ ತಪ್ಪದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಎನ್ನ ಭವಿತನವ ಕಳೆದು ಭಕ್ತನ ಮಾಡಿದಿರಿಯಯ್ಯ. ಪಂಚಭೂತದ ಪ್ರಕೃತಿಕಾಯವ ಕಳೆದು ಪ್ರಸಾದಾಕಾಯವ ಮಾಡಿದಿರಿಯಯ್ಯ. ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದಿರಿಯಯ್ಯ. ಅಂಗೇಂದ್ರಿಯ ಕಳೆದು ಲಿಂಗೇಂದ್ರಿಯವ ಮಾಡಿದಿರಿಯಯ್ಯ. ಅಂಗವಿಷಯಭ್ರಮೆಯ ಕಳೆದು ಲಿಂಗವಿಷಯಭ್ರಾಂತನ ಮಾಡಿದಿರಿಯಯ್ಯ. ಅಂಗ ಕರಣಂಗಳ ಕಳೆದು ಲಿಂಗ ಕರಣಂಗಳ ಮಾಡಿದಿರಿಯಯ್ಯ. ಆ ಲಿಂಗ ಕರಣಂಗಳೇ ಹರಣ ಕಿರಣವಾಗಿ ಬಿಂಬಿಸುವಂತೆ ಮಾಡಿದಿರಿಯಯ್ಯ. ಕುಲಸೂತಕ ಛಲಸೂತಕ ತನುಸೂತಕ ಮನಸೂತಕ ನೆನಹುಸೂತಕ ಭಾವಸೂತಕವೆಂಬ ಇಂತೀ ಭ್ರಮೆಯ ಕಳೆದು ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ ನಮೋನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.