ಭಕ್ತಿಸ್ಥಲ ಮಾಹೇಶ್ವರಸ್ಥಲದಲ್ಲಿ ಅಡಗಿ,
ಮಾಹೇಶ್ವರಸ್ಥಲ ಪ್ರಸಾದಿಸ್ಥಲದಲ್ಲಡಗಿ,
ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲದಲ್ಲಡಗಿ,
ಪ್ರಾಣಲಿಂಗಿಸ್ಥಲ ಶರಣಸ್ಥಲದಲ್ಲಡಗಿ,
ಶರಣಸ್ಥಲ ಐಕ್ಯಸ್ಥಲದಲ್ಲಡಗಿ,
ಇಂತೀಷಡಂಗಯೋಗ ಸಮರಸವಾಗಿ
ಷಡುಸ್ಥಲವ ಮೀರಿ ನಿರವಯಸ್ಥಲವನೆಯ್ದಿ,
ಆ ನಿರವಯಸ್ಥಲ ನಿರಾಳದಲ್ಲsಗಿ,
ಆ ನಿರಾಳ ನಿತ್ಯನಿರಂಜನ ಪರವಸ್ತು ತಾನಾಯಿತ್ತಾಗಿ,
ಕ್ರಿಯಾನಿಷ್ಪತ್ತಿ ಜ್ಞಾನನಿಷ್ಪತ್ತಿ ಭಾವನಿಷ್ಪತ್ತಿ,
ಮಾಡುವ ಕ್ರೀಗಳೆಲ್ಲಾ ನಿಷ್ಪತ್ತಿಯಾಗಿ,
ಅರಿವ ಅರುಹೆಲ್ಲಾ ಅಡಗಿ,
ಭಾವಿಸುವ ಭಾವವೆಲ್ಲ ನಿರ್ಭಾವವಾಗಿ,
ನಿರ್ಲೇಪಕ ನಿರಂಜನ ವಸ್ತು ತಾನು ತಾನಾದಲ್ಲದೆ,
ಧ್ಯಾನಿಸಲಿಕೇನೂ ಇಲ್ಲ.
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ,
ಷಟ್ಸ್ಥಲಜ್ಞಾನಸಾರಾಯಸ್ವರೂಪನೆಂದು
ಹೇಳಲ್ಪಟ್ಟನು.