ರೂಪಾಗಿ ಬಂದ ಪದಾರ್ಥವ ಕಾಯದ ಕೈಯಲ್ಲಿ ಇಷ್ಟಲಿಂಗಕ್ಕೆ ಕೊಟ್ಟು ಶುದ್ಧ ಪ್ರಸಾದವ ಕೊಂಡು ಸರ್ವಾಂಗಶುದ್ಧನಾದೆನು ನೋಡಾ. ರುಚಿಯಾಗಿ ಬಂದ ಪದಾರ್ಥವ ಮನದ ಕೈಯಲ್ಲಿ, ಜಿಹ್ವೆಯ ಮುಖದಲ್ಲಿ ಪ್ರಾಣಲಿಂಗಕ್ಕೆ ಕೊಟ್ಟು ಸಿದ್ಧಪ್ರಸಾದಗ್ರಾಹಕನಾಗಿ ಮನ ನಿರ್ಮಲವಾಯಿತ್ತು ನೋಡಾ. ಪರಿಣಾಮವಾಗಿ ಬಂದ ಪದಾರ್ಥವ ಭಾವದ ಕೈಯಲ್ಲಿ, ಹೃದಯದ ಮುಖದಲ್ಲಿ ತೃಪ್ತಿಲಿಂಗಕ್ಕೆ ಕೊಟ್ಟು ಪ್ರಸಿದ್ಧಪ್ರಸಾದವ ಕೊಂಡು ಶುದ್ಧಪರಮಾತ್ಮನಾದೆನು ನೋಡ. ಈ ಕ್ರಿಯಾಜ್ಞಾನಾರ್ಪಣವಿರಬೇಕು. ಕಾಯವು ಆತ್ಮನು ಬಯಲಾಹನ್ನಕ್ಕರ. ಈ ಕಾಯವೂ ಜೀವವೂ ಪರತತ್ವದಲ್ಲಿ ಅಡಗದೆ, ಬರಿಯ ವಾಗದ್ವೆ ೈತದಿಂದ ತಾನೆ ಲಿಂಗವಾದೆನೆಂದು, ಇಷ್ಟಲಿಂಗಾರ್ಪಣವ ಬಿಡುವ ನಾಯ ಮುಖವ ಎನಗೊಮ್ಮೆ ತೋರದಿಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ರವಿಯ ಮಂಡಲದಲ್ಲಿ ಶಶಿಯ ಮೇಘದ ಸೋನೆ ಸುರಿವುತ್ತಿದೆ. ಅಗ್ನಿವರ್ಣದ ಬೀಜದಲ್ಲಿ ಐದುವರ್ಣದ ವೃಕ್ಷ ಹುಟ್ಟಿತ್ತು ನೋಡಿರೇ. ಆ ವೃಕ್ಷ ನಾನಾರೂಪಿನ ಫಲ ಪ್ರಜ್ವಲಿಸುತ್ತಿದೆ ನೋಡಾ. ನಾನಾರೂಪಿನ ಪ್ರಜ್ವಲಾಕಾರ ಏನು ಏನೂ ಇಲ್ಲದ ಠಾವಿನಲ್ಲಿ ವಿಶ್ರಾಂತಿಯನೆಯ್ದಿರೆ. ನಾನು ಸ್ವಯಂಭುವಾದೆನು ಕಾಣಾ. ಏನು ಏನೂ ಇಲ್ಲದ ನಿರಾಳ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.