ದೇವರ ಪೂಜಿಸಿ, ಕಾಯಗೊಂಡು ಹುಟ್ಟಿ,
ಪುತ್ರ ಮಿತ್ರ ಕಳತ್ರತ್ರಯ ಧನಧಾನ್ಯ ಷಡುಚಂದನಾದಿ
ಭೋಗಾದಿಭೋಗಂಗಳ ಪಡೆದು
ಭೋಗಿಸಿ ಸುಖಿಸಿಹೆನೆಂಬೆಯೆಲೆ ಮರುಳು ಮಾನವ,
ಕಾಯವೇ ದುಃಖದಾಗರವೆಂದು ಅರಿಯೆಯಲ್ಲ?
ಕಾಯವೇ ಸಕಲಧರ್ಮಕರ್ಮಕ್ಕಾಶ್ರಯವೆಂದರಿಯೆಯಲ್ಲ?
ಪುಣ್ಯ ಪಾಪವಶದಿಂದ
ಸ್ವರ್ಗನರಕಕ್ಕೆಡೆಯಾಡುತ್ತಿಪ್ಪುದನರಿಯೆಯಲ್ಲ?
ಹುಟ್ಟುವುದು ಮಹಾದುಃಖ; ಹುಟ್ಟಿ ಸಂಸಾರಶರಧಿಯೊಳು
ಬದುಕುವುದು ದುಃಖ.
ಸಾವ ಸಂಕಟವನದ ನಾನೇನೆಂಬೆನಯ್ಯಾ,
ಅದು ಅಗಣಿತ ದುಃಖ.
ಆವಾವ ಪರಿಯಲ್ಲಿ ತಿಳಿದುನೋಡಲು,
ಈ ಮೂರು ಪರಿಯ ದುಃಖ ಮುಖ್ಯವಾದ
ಅನಂತ ದುಃಖ ನೋಡಾ.
ಈ ಕಾಯದ ಕಂಥೆಯ ತೊಟ್ಟು ಕರ್ಮದೊಳಗಿರದೆ,
ಮಾಯಾಮೋಹನ ತಾಳ್ದು ಮತ್ತನಾಗಿರದೆ,
ಪಂಚೇಂದ್ರಿಯಂಗಳ ಸುಖಕ್ಕೆ ಮೆಚ್ಚಿ ಮರುಳಾಗದೆ,
ಪಂಚವದನನ ನೆನೆನೆನೆದು
ಸಂಸಾರಪ್ರಪಂಚವ ತಪ್ಪಿಸಿಕೊಂಬ ಸುಬುದ್ಧಿಯ ಕಲಿಸಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.