ಏನನೋದಿದರೇನಯ್ಯಾ?
ಏನಕೇಳಿದರೇನಯ್ಯಾ?
ಏನಹಾಡಿದರೇನಯ್ಯಾ?
`ಓದಿ ಮರುಳಾದೆಯೋ ಕೂಚಿಭಟ್ಟ'ರೇ! ಎಂದು.
ಗಿಣಿಯೋದಿ ತನ್ನ ಹೇಲ ತಾ ತಿಂದಂತೆ,
ಏಕಲಿಂಗನಿಷ್ಠಾಚಾರ ಸ್ವಾನುಭವವಿವೇಕ
ಸಿದ್ಧಾಂತ ನಿರ್ಣಯವಿಲ್ಲದೆ,
ಮಾತಿಗೆ ಮಾತುಕಲಿತು ನುಡಿಗೆ ನುಡಿಯ ಕಲಿತು
ತರ್ಕಮರ್ಕಟರಂತೆ ಹೋರುವ
ಬಯಲಸಂಭ್ರಮದ ತರ್ಕಿಗಳ ಕಂಡರೆ,
ಮಾಗಿಯ ಕೋಗಿಲೆಯಂತೆ
ಮುಖ ಮುನಿಸಾಗಿರಿಸಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.