ಲೋಕಾಧಿ ಲೋಕಂಗಳೇನುಯೇನೂ ಇಲ್ಲದಂದು
`ಏಕಮೇವಾದ್ವಿತೀಯಂ ಪರಬ್ರಹ್ಮ' ತಾನೊಂದೆ ನೋಡಾ.
ಅದು ತನ್ನನು ನೆನೆಯದೆ, ಇದಿರನು ನೆನೆಯದೆ
ನೆನಹು ನಿಷ್ಪತ್ತಿಯಾಗಿದ್ದಿತು ನೋಡ.
ಆ ನೆನಹಿಲ್ಲದ ಘನವಸ್ತು ನೆನೆದ ನೆನಹೆ
ಸಾವಯವಾಗಿ ಚಿತ್ತೆನಿಸಿಕೊಂಡಿತ್ತು.
ಆ ಚಿತ್ತೇ, ಸತ್ತು, ಚಿತ್ತು, ಆನಂದ, ನಿತ್ಯ, ಪರಿಪೂರ್ಣ
ಎಂಬ ಐದಂಗವನಂಗೀಕರಿಸಿ,
ನಿಃಕಲ ಶಿವತತ್ವವೆನಿಸಿತ್ತು ನೋಡ.
ಆ ನಿಃಕಲ ಶಿವತತ್ವ ತಾನೊಂದೆ,
ತನ್ನ ಶಕ್ತಿಯ ಚಲನೆಮಾತ್ರದಿಂದ
ಒಂದೆರಡಾಯಿತ್ತು ನೋಡ.
ಅದರೊಳಗೆ ಒಂದು ಲಿಂಗಸ್ಥಲ, ಮತ್ತೊಂದು ಅಂಗಸ್ಥಲ.
ಹೀಂಗೆ ಅಂಗ ಲಿಂಗವೆಂದು, ಉಪಾಸ್ಯ ಉಪಾಸಕನೆಂದು,
ವರ್ತಿಸುತ್ತಿಹುದು ನೋಡ.
ಆ ಪರಶಿವನ ಚಿಚ್ಛಕ್ತಿ ತಾನೆ ಎರಡು ತೆರನಾಯಿತ್ತು.
ಲಿಂಗಸ್ಥಲವನಾಶ್ರಯಿಸಿ ಶಕ್ತಿಯೆನಿಸಿತ್ತು,
ಅಂಗಸ್ಥಲವನಾಶ್ರಯಿಸಿ ಭಕ್ತಿಯೆನಿಸಿತ್ತು.
ಶಕ್ತಿಯೆ ನಿವೃತ್ತಿಯೆನಿಸಿತ್ತು.
ಶಕ್ತಿ ಭಕ್ತಿಯೆಂದೆರಡು ಪ್ರಕಾರವಾಯಿತ್ತು ಶಿವನ ಶಕ್ತಿ.
ಲಿಂಗವಾರು ತೆರನಾಯಿತ್ತು; ಅಂಗವಾರು ತೆರನಾಯಿತ್ತು.
ಶಕ್ತಿಯಾರು ತೆರನಾಯಿತ್ತು; ಭಕ್ತಿಯಾರು ತೆರನಾಯಿತ್ತು.
ಅದು ಹೇಂಗೆಂದಡೆ;
ಮೊದಲಲ್ಲಿ ಲಿಂಗ ಮೂರು ತೆರನಾಯಿತ್ತು.
ಅದು ಹೇಂಗೆಂದಡೆ :
ಭಾವಲಿಂಗವೆಂದು, ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು,
ಮೂರು ತೆರನಾಯಿತ್ತು.
ಆ ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗವೆಂಬ ಲಿಂಗತ್ರಯವು
ಒಂದೊಂದು ಲಿಂಗವೆರಡೆರಡಾಗಿ ಆರು ತೆರನಾಯಿತ್ತು.
ಅದು ಹೇಂಗೆಂದಡೆ :
ಭಾವಲಿಂಗವು ಮಹಾಲಿಂಗವೆಂದು, ಪ್ರಸಾದಲಿಂಗವೆಂದು
ಎರಡು ತೆರನಾಯಿತ್ತು.
ಪ್ರಾಣಲಿಂಗವು ಜಂಗಮಲಿಂಗವೆಂದು, ಶಿವಲಿಂಗವೆಂದು
ಎರಡು ತೆರನಾಯಿತ್ತು.
ಇಷ್ಟಲಿಂಗವು ಗುರುಲಿಂಗವೆಂದು, ಆಚಾರಲಿಂಗವೆಂದು
ಎರಡು ತೆರನಾಯಿತ್ತು.
ಹೀಂಗೆ ಒಬ್ಬ ಶಿವನು ಆರು ತೆರನಾದನು.
ಶಾಂತ್ಯತೀತೋತ್ತರೆಯೆಂಬ ಕಲಾಪರಿಯಾಯವನುಳ್ಳ ಚಿಚ್ಛಕ್ತಿ,
ಶಾಂತ್ಯತೀತೆಯೆಂಬ ಕಲಾಪರಿಯಾಯವನುಳ್ಳ ಪರಾಶಕ್ತಿ,
ಶಾಂತಿಯೆಂಬ ಕಲಾಪರಿಯಾಯವನುಳ್ಳ ಆದಿಶಕ್ತಿ,
ವಿದ್ಯಾಕಲಾಪರಿಯಾಯವನುಳ್ಳ ಇಚ್ಛಾಶಕ್ತಿ,
ಪ್ರತಿಷಾ*ಕಲಾಪರಿಯಾಯವನುಳ್ಳ ಕ್ರಿಯಾಶಕ್ತಿ.
ನಿವೃತ್ತಿ ಕಲಾಪರಿಯಾಯವನುಳ್ಳ ಜ್ಞಾನಶಕ್ತಿ,
ಹೀಂಗೆ ಒಂದೇ ಶಿವಶಕ್ತಿ ಆರು ತೆರನಾಗಿ,
ಷಟ್ಪ್ರಕಾರವಹಂಥಾ ಲಿಂಗಕ್ಕೆ ಅಂಗರೂಪಾಯಿತ್ತು.
ಇದು ಲಿಂಗಷಟ್ಸ್ಥಲ.
ಇನ್ನು ಒಂದು ಅಂಗ ಮೂರು ತೆರನಾಯಿತ್ತು.
ಅದು ಹೇಂಗೆಂದಡೆ:
ಯೋಗಾಂಗ, ಭೋಗಾಂಗ, ತ್ಯಾಗಾಂಗವೆಂದು ಮೂರು
ಪ್ರಕಾರವಾಯಿತ್ತು.
ಈ ತ್ರಯಾಂಗ ಒಂದೊಂದು ಎರಡೆರಡಾಗಿ,
ಆರು ತೆರನಾಯಿತ್ತು.
ಅದು ಹೇಂಗೆಂದೆಡೆ:
ಯೋಗಾಂಗವೆ ಐಕ್ಯನೆಂದು, ಶರಣನೆಂದು ಎರಡು ತೆರನಾಯಿತ್ತು.
ಭೋಗಾಂಗವೆ ಪ್ರಾಣಲಿಂಗಿಯೆಂದು, ಪ್ರಸಾದಿಯೆಂದು
ಎರಡು ತೆರನಾಯಿತ್ತು.
ತ್ಯಾಗಾಂಗವೆ ಮಾಹೇಶ್ವರನೆಂದು, ಭಕ್ತನೆಂದು
ಎರಡು ತೆರನಾಯಿತ್ತು.
ಹೀಂಗೆ ಒಬ್ಬ ಶಿವಶರಣನು ಆರು ತೆರನಾದನು.
ಸಮರಸಭಕ್ತಿ, ಆನಂದಭಕ್ತಿ, ಅನುಭಾವಭಕ್ತಿ, ಅವಧಾನಭಕ್ತಿ,
ನೈಷ್ಟಿಕಾಭಕ್ತಿ, ಸದ್ಭಕ್ತಿ ಎಂದು
ಮಹಾಘನ ಅನುಪಮಭಕ್ತಿ ತಾನೆ ಆರು ತೆರನಾಗಿ,
ಷಟ್ಪ್ರಕಾರವಹಂಥ ಶರಣಂಗೆ ಅಂಗರೂಪವಾಯಿತ್ತು.
ಇದು ಅಂಗಷಟ್ಸ್ಥಲ.
ಇನ್ನು ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ-
ಆ ನಿವೃತ್ತಿಯ ಕಲೆಯ ಸಂಕಲ್ಪಮಾತ್ರದಿಂದ ಮಾಯಾಶಕ್ತಿ ಹುಟ್ಟಿದಳು.
ಆ ಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಉತ್ಪತ್ತಿ.
ಅಂಗವೆಂದಡೆ ಶರಣ:ಲಿಂಗವೆಂದಡೆ ಶಿವ.
ಆ ಶರಣಂಗೆ ಆ ಲಿಂಗವು ಆವಾಗಲೂ ಪ್ರಾಣವು
ಆ ಲಿಂಗಕ್ಕೆ ಆ ಶರಣನಾವಾಗಲೂ ಅಂಗವು.
ಈ ಶರಣ ಲಿಂಗವೆರಡಕ್ಕೂ ಬೀಜವೃಕ್ಷನ್ಯಾಯದ ಹಾಂಗಲ್ಲದೆ,
ಭಿನ್ನವಿಲ್ಲ.
ಇದು ಕಾರಣ, ಅನಾದಿಯಿಂದವು
ಶರಣನೆಂದಡೆ ಲಿಂಗ, ಲಿಂಗವೆಂದೆಡೆ ಶರಣ,
ಈ ಶರಣ ಲಿಂಗವೆರಡಕ್ಕೂ ಭೇದವಿಲ್ಲವೆಂಬುದನು
ಸ್ವಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ,
ಆಗಮಯುಕ್ತಿಯಿಂದ ಅರಿದುದು ಅರುಹಲ್ಲ.
ಅದೇನು ಕಾರಣವೆಂದಡೆ;
ಶಾಸ್ತ್ರಜ್ಞಾನದಿಂದ ಸಂಕಲ್ಪ ಹಿಂಗದಾಗಿ.
ಈ ಷಟ್ಸ್ಥಲಮಾರ್ಗವು ದ್ವೆ ೈತಾದ್ವೆ ೈತದ ಪರಿವರ್ತನೆಯಲ್ಲ.
ಅದೇನು ಕಾರಣವೆಂದಡೆ;
ಇದು ಶಿವಾದ್ವೆ ೈತಮಾರ್ಗವಾದ ಕಾರಣ.
ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ
ಬೊಮ್ಮ, ಪರಬೊಮ್ಮನೆಂದು ಬೇರುಂಟೆ ತಾನಲ್ಲದೇ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.