ಒಂದು ವಿಷಯಕೆ ಮನೆಯ ನೋಡಿ ಮಾಡುವರು ತನುಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ಧನವ ನೋಡಿ ಮಾಡುವರು ಪ್ರಾಣನಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ನೆರವಿಯ ನೋಡಿ ಮಾಡುವರು ಭಾವದಗುಂಜ ತಪ್ಪಿಸಿ ತರಲರಿಯದವರು. ಈ ಸಂಬೋಧೆಯ ಆಸೆಗಿಕ್ಕಿ ಹೇಸದೆ ಘಾಸಿಯಾಗುವ ಪ್ರಾಣಿಗಳು ತಮಗೆ ಗುರುತ್ವ ಸಹಜವೆ ಅಲ್ಲ. ಮತ್ತೆಂತೆಂದೊಡೆ : ಭೂಷಣವಿಲ್ಲದ ಶಿಷ್ಯಂಗೆ ಗುಣವಿಲ್ಲದ ಗುರುವು ಅಣಕದನುಗ್ರಹ ಎಣಿಕೆಗೆಬಾರದು ನಮ್ಮ ಗುರುನಿರಂಜನ ಚನ್ನಬಸವಲಿಂಗದ ಶರಣಚಾರಿತ್ರದೊಳಗೆ.
ಒಂದು ಹಿಡಿತೆಗೆ ಬಂದು ಕವಿದ ಕಾಳಗತ್ತಲೆಯ ಹರಿದು ಬಂದ ಬರವಿಂಗೆ, ಚಿತ್ಕಾಂತನೊಲಿದು ಸದ್ರೂಪ ಸಲೆನಿಂದು, ನೋಡಿ ನೋಡಿ, ಕಳೆದು ಕಣ್ದೆರಪ ಮಾಡಿ, ಕರುಣಿಸಿ ಸಲಹಿದ ನಿತ್ಯನಿರಂಜನ ಚನ್ನಬಸವಲಿಂಗ.
ಒಂದನಾಡಹೋಗಿ ಮತ್ತೊಂದನಾಡುವರು. ಹಿಂದೆ ಹೋದುದ ಮುಂದೆ ತಂದಿಡುವರು. ಮುಂದಿನ ಮಾತ ಹಿಂದಕ್ಕೆ ನೂಕುವರು ಇಲ್ಲದುದನುಂಟುಮಾಡಿ ಗಂಟನಿಕ್ಕಿ ನೋಯಿಸುವರು. ಗುರುಹಿರಿಯರ ಮತ್ತೆ ತಾವು ಶರಣರೆಂದು ನುಡಿವರು. ಇಂತಾ ತ್ರಿವಿಧದ್ರೋಹಿಗಳನೆಂತು ಶರಣರೆನ್ನಬಹುದು? ಅಯ್ಯಾ ನಿಮ್ಮವರ ಕವಳಿಕೆಗೆ ಸಲ್ಲದ ಕರ್ಮಿ ಪಾಪಿಗಳನೆನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ.
ಒಂಬತ್ತನೊಳಕೊಂಡು ಒಂದೇ ಪೂಜೆಯೆಂಬ ಹಾಗೆ ನವನಾಳಸೂತ್ರವಪ್ಪ ಪಲವು ಪ್ರಕೃತಿಯನೊಳಕೊಂಡು ತೋರುವ ಆತ್ಮವೊಂದೆ ಪೂಜೆಯಾಗಿಪ್ಪುದು. ಆ ಒಂದೇ ಆತ್ಮನನರಿದು ಮರೆತಲ್ಲಿ ಗುರುನಿರಂಜನ ಚನ್ನಬಸವಲಿಂಗವು ಶೂನ್ಯ.
ಒಳಗಿಲ್ಲದ ಹೊರಗಿಲ್ಲದ ತೆರಹಿಲ್ಲದ ಪರಿಪೂರ್ಣಲಿಂಗಕ್ಕೆ ಮಾಡಿ ಕೆಟ್ಟರು ಮನಮುಖಹಿರಿಯರು, ನೀಡಿ ಕೆಟ್ಟರು ತನುಮುಖಹಿರಿಯರು, ಕೂಡಿ ಕೆಟ್ಟರು ಭಾವಮುಖಹಿರಿಯರು, ಇದನರಿದು ನಾನು ಮಾಡದೆ ನೀಡದೆ ಕೂಡದೆ ಮಾಡಿ ಭವಗೆಟ್ಟೆ, ನೀಡಿ ನಿರ್ಮಲವಾದೆ, ಕೂಡಿ ನಾನು ಕೆಟ್ಟೆ, ನಿನ್ನನರಿಯದಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.