ಸ್ಥೂಲಾಂಗವೆಂಬ ಷಡ್ವಿಧೇಂದ್ರಿಯಂಗಳಲ್ಲಿ
ಷಡ್ವಿಧಲಿಂಗವಾಗಿರ್ದ ಇಷ್ಟಲಿಂಗಾಯತನಾಗಿ,
ಸೂಕ್ಷ್ಮಾಂಗವೆಂಬ ಷಟ್ಕರಣಂಗಳಲ್ಲಿ
ಷಡ್ವಿಧಲಿಂಗವಾಗಿರ್ದ ಪ್ರಾಣಲಿಂಗಸ್ವಾಯತನಾಗಿ,
ಕಾರಣಾಂಗವೆಂಬ ಷಡ್ವಿಧವಿಷಯಂಗಳಲ್ಲಿ
ಷಡ್ವಿಧಲಿಂಗವಾಗಿರ್ದ ಭಾವಲಿಂಗಸನ್ನಿಹಿತನಾಗಿ.
ಈ ತ್ರಿವಿಧಲಿಂಗವೊಂದಾಗಿರ್ದ ಮಹಾಘನಾನಂದ ಪ್ರಭಾನಿತ್ವ ಶರಣನು,
ತಾನೆ ನಡೆದುದೆಲ್ಲ ಸತ್ಕ್ರಿಯೆ, ಹಿಡಿದುದೆಲ್ಲ ಸದ್ವೃತ,
ನುಡಿದುದೆಲ್ಲ ಪರಮಾನುಭಾವ,
ನೆನೆವುದೆಲ್ಲ ಶಿವಮಂತ್ರ, ಧ್ಯಾನಿಸವುದೆಲ್ಲ ಸ್ವಯಮಾನಂದ ಸುಖವು,
ನೋಡಿ, ಪರಿಣಾಮಿಸುವುದೆಲ್ಲ ನಿಜಲೀಲೆ ಮತ್ತೇನುಯಿಲ್ಲದ
ಎತ್ತೆತ್ತರುವಿನತ್ತತ್ತ,
ಗುರುನಿರಂಜನ ಚನ್ನಬಸವಲಿಂಗ ತಾನೇ ಪರಿಪೂರ್ಣ.