ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ.
ಸಂಸಾರದಲ್ಲಿ ತೊಳಲುವ ಭಾವ ಮುಂದೆ
ಮರಣಬಾಧೆಯಲ್ಲಿ ಮುಳುಗುವುದೇ ಸಾಕ್ಷಿ.
ಅದಲ್ಲದೆ ಗುರುವಿನಲ್ಲಿ ಜನಿಸಿದ ಭಾವ ಸರ್ವಾಚಾರ ಸಂಪತ್ತಿನೊಳಗೆ
ಭೋಗೋಪಭೋಗಿಯಾಗಿಹುದೇ ಸಾಕ್ಷಿ.
ಸರ್ವಾಚಾರಸಂಪತ್ತಿನೊಳಗೆ ಭೋಗೋಪಭೋಗಿಯಾಗಿರ್ದ ಭಾವ
ಮಹಾಲಿಂಗೈಕ್ಯಪದಲೋಲವಾದುದೇ ಸಾಕ್ಷಿ.
ಇದು ಕಾರಣ ಆ ಭಾವಕ್ಕೆ ಸಂದುಸಂಶಯದ ಗೊಂದಣವುಂಟಲ್ಲದೆ
ಈ ಭಾವಕ್ಕೆ ಸಂದುಸಂಶಯದ ಗೊಂದಣವುಂಟೆ ?
ಇದೇ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಸದ್ಭಾವ.