ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ
ನಿರಂಜನಲಿಂಗವ ಪಡೆದ ಅಗಣಿತಪ್ರಸಾದಿಯು
ತಾನು ತನ್ನಾನಂದಕ್ಕೆ ಅಡಿಯಿಟ್ಟು ನಡೆವಲ್ಲಿ,
ತನ್ನ ಪದದನುವನರಿದು ಸಾಕಾರ, ನಿರಾಕಾರ, ನಿರ್ಮಾಯಕ್ಕಿತ್ತು,
ಅರಿದರಿದುಕೊಂಡಾನಂದಿಸುವನಲ್ಲದೆ,
ಅಘಭರಿತ ಜಗಭಂಡ ಜಂಗುಳಿಗಳಂತೆ,
ಮಣ್ಣಿನ ಕರ್ಮದಲ್ಲಿ ನಿಂದು, ಹೆಣ್ಣಿನ ಮೋಹದಲ್ಲಿ ಸಿಲ್ಕಿ,
ಹೊನ್ನಿನಾಸೆಯಲ್ಲಿ ಮುಳುಗಿ ಚನ್ನಗುರುಲಿಂಗ ಜಂಗಮಕ್ಕಿತ್ತು
ಕೊಂಬ ಉನ್ನತಪ್ರಸಾದಿಗಳೆಂದು,
ಕುನ್ನಿಗಳ ಧ್ವನಿ ಸಹಜದಂತಿರುವರಲ್ಲಾ,
ಗುರುನಿರಂಜನ ಚನ್ನಬಸವಲಿಂಗಾ.