ರಾಜಯೋಗಿ ಶಿವಯೋಗಿಗಳೆಂದು ಹೆಸರಿಟ್ಟು ನುಡಿವರು.
ಆ ಭಾವವನರಿಯದ ಉಪಭ್ರಾಂತರುಗಳ ಮಾತು ಸೊಗಸದಯ್ಯಾ.
ಪುಚ್ಚಗುಂಡಾಟದ ಬಾಲರಂತಿರಲಿ,
ಅನಬಹುದು ಸರ್ವಾಚಾರಸಂಪತ್ತಿನ ಲೋಲರಿಗೆ ರಾಜಯೋಗಿಗಳೆಂದು.
ಅನಬಹುದು ಪರಿಪೂರ್ಣಜ್ಞಾನಾನಂದ ಸುಖಮುಖಲೋಲರಿಗೆ
ಶಿವಯೋಗಿಗಳೆಂದು.
ಈ ದ್ವಂದ್ವೈಶ್ವರ್ಯ ಕಾಣಿಸಿಕೊಳ್ಳದೆ ಮುಂದೇನರಿಯದ
ಮಂದಮತಿಗಳ ಹಿಡಿದು ತಂದು
ಕರ್ಮಕಟ್ಟಳೆಯಿಂದೆ ಕೂಡಿಸಿಕೊಂಡು ತಮ್ಮ ಅಹಂಭಾವನಿಮಿತ್ಯಕ್ಕೆ
ಪರಮವಿರಾಗತಿಗಳೆಂದು ಹೇಳಿಸಿಕೊಂಬ ಕಣ್ಮನಭಾವದ ಕಲ್ಮಷವ ನೋಡಾ.
ಹುಸಿಯಿಂದೆ ಹೊಡದಾಡಿ ಮಠ ಕ್ಷೇತ್ರವೆಂದು ಆಮಿಷ ಮೋಹದಲ್ಲಿ ಮುಳುಗಿ
ಪೂರ್ವಪಕ್ಷಾಳಿಯ ಸಂಸಾರದುರ್ನಡತೆಯೊಳ್ನಿಂದು ಮೆರೆವ
ಮಲತ್ರಯರತಿ ಮೆಚ್ಚಿರುವವರಿಗೆ ರಾಜಯೋಗಿಗಳೆನ್ನಬಹುದೆ ?
ಜಿಹ್ವೋಚ್ಫಿಷ್ಟ, ಪ್ರಾಣಿಗಳಿರಾ ! ಕ್ರುದ್ಧಮೃಗದಂತೆ ತಿರುತಿರುಗಿ ಬಳಲಿ
ಒಂದು ಸ್ಥಾನವಿಡಿದು ಪೂರ್ವದ ದುಸ್ಸಾರರತಿಯ ನೆನವಿನೊಳಿಟ್ಟು
ವೇಷಜಾಣಿಕೆಯನರಿದು ಕಂಡು ಕಂಡು ಸೋಗು ತಾಳುವ
ಕೀಳುಜಾತಿ ಕಿಲ್ಬಿಷಭರಿತರಿಗೆ ಶಿವಯೋಗಿಗಳೆನ್ನಬಹುದೆ ?
ತನು ಮನ ಭಾವೋಚ್ಫಿಷ್ಟ ಪ್ರಾಣಿಗಳಿರಾ, ಇದು ಕಾರಣ,
ಆಟದವರು, ನೋಟದವರು, ಕೂಟದವರು ಕೂಡಿಯೈದುವರು ಸಂಘಾತವನು.
ಮತ್ತೆ ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರೆ
ರಾಜಯೋಗಿ ಶಿವಯೋಗಿಗಳಲ್ಲದೆ
ಮಿಕ್ಕ ಭವಭಾರಿಗಳ ತರಲಾಗದು ಘನದ ಮುಂದೆ.