ಬಯಲು ನಲುಗಿ ಬಯಲು ನಿಂದು ಬಯಲರುಹಿಸಿ, ಬಯಲಿಂಗೆ ಬಯಲು ಬಲಿದು, ಬಯಲಿಂದೆ ಬಯಲಳಿದು, ಬಯಲು ಬಯಲ ಕೂಡಿ ನಿರ್ವಯಲು ಹುಟ್ಟಿ ಬಯಲಸಮರಸದಲ್ಲಿ ಬಯಲು ನಿರ್ವಯಲಾಗಿ ನಿರವಯವಾಯಿತ್ತು ಗುರುನಿರಂಜನ ಚನ್ನಬಸವಲಿಂಗಾ.
ಬೇರಿಲ್ಲದ ಗಂಡಂಗೆ ತೋರಿಮಾಡುವರಾರೂ ಇಲ್ಲ. ಈ ಧರೆಯಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಜಲದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ತೇಜದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಪವನದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಅಂಬರದಿಂದಲರಿದು ಶರಣುಹೊಕ್ಕು ಸುಖಿಯಾದೆ. ಗುರುನಿರಂಜನ ಚನ್ನಬಸವಲಿಂಗಾ ನಿನ್ನ ಪಂಚಮುಖದಿಂದೆ ನಿನ್ನನರಿದು ಶರಣುಹೊಕ್ಕು ಪರಮಸುಖಪರಿಣಾಮಿಯಾಗಿರ್ದೆನು ಕಾಣಾ.