ತನುತ್ರಯ ಮಲತ್ರಯಂಗಳೆಂಬ ಶಂಕೆಯಲ್ಲಿ ಕೆಡದೆ,
ಹಮ್ಮಿನ ಬೊಮ್ಮನ ನೀನಾಡದೆ ಮಾಡಾ ಲಿಂಗಾರ್ಚನೆಯ,
ಶ್ರೋತ್ರಿಯ ಕೈಗಳಿಂದ ಇಷ್ಟಂಗಾರ್ಚನೆಯ,
ನೇತ್ರದ ಕೈಯಿಂದ ಗುರುಲಿಂಗಾರ್ಚನೆಯ.
ಇಂತು ತ್ರಿವಿಧ ಮುಟ್ಟಿ ಕರಕರಂಗಳಲ್ಲಿ
ಚರಂಗಾರ್ಚನೆಯ ಮಾಡಿರಯ್ಯಾ ಮನಮುಟ್ಟಿ.
ಚರಂಗಾರ್ಚನೆಯಿಂದ
ಭಕ್ತನೆನಿಸುವೆ, ಮಾಹೇಶ್ವರನೆನಿಸುವೆ,
ಪ್ರಾಣಲಿಂಗಿ, ಶರಣ, ಪ್ರಸಾದಿ, ಐಕ್ಯನೆನಿಸುವೆ,
ಜನನ ಮರಣಾದಿಗಳಿಗೆ ದೂರನೆನಿಸುವೆ,
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ
ಶುದ್ಧಸಿದ್ಧ ಪ್ರಸಿದ್ಧ ಏಕ ಏಕ ಎನಿಸುವೆ.