ನೀನು ಸಕಲದಲ್ಲಿ ಸ್ವಾತ್ಮಿಸುವ ಭೇದವ ನೀನು ನಿಃಕಲದ್ಲ ಪ್ರವೇಶಿಸುವ ಭೇದವ ನೀನು ಸಕಲ ನಿಃಕಲಾತ್ಮಕವಾಗಿ ತೊಳಗಿ ಬೆಳಗುತಿಪ್ಪ ಭೇದವ ಅರಿಯಬಹುದೆ ಎಲ್ಲರಿಗೆ? ಆನಂದಸ್ಥಾನದಲ್ಲಿ ಬೆಳಗುತ್ತಿಪ್ಪ ಅಕ್ಷರದ್ವಯದ ಭೇದವ ಅನ್ಯರಿಗೆಂತರಿಯಬಹುದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
ನುಡಿದೆಹೆನೆಂಬ ಉಲುಹಿನ ಗಲಭೆಯ ತೋಟಿ ಬಿಡದು. ಉತ್ತಮ ಮಧ್ಯಮ ಕನಿಷ್ಠವೆಂಬುವ ತಿರುಗಿ ಕಂಡೆಹೆನೆಂಬ ಕಾಲಿನ ಎಡೆಯಾಟ ಬಿಡದು. ಎನಗೆ ಗರ್ವ ಮೊದಲಾದಲ್ಲಿ ನಿಮಗೆ ಗರ್ವ ವೆಗ್ಗಳವಾಯಿತ್ತು. ಈ ಉಭಯ ತೋಟಿಯ ನಾನಿನ್ನಾರಿಗೆ ಹೇಳುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
ನೋಡಿ ನೋಡಿ ಕಂದದಿದ್ದಡೆ, ಕೂಡಿ ಕೂಡಿ ಲೀಯವಾಗದಿದ್ದಡೆ, ಆ ನೋಟ ಕೂಟ ಏತಕ್ಕೆ ಹೇಳಾ, ಎಲೆ ಅವ್ವಾ? ಕಪಿಲಸಿದ್ಧಮಲ್ಲಿಕಾರ್ಜುನಾ, ನಿನ್ನ ಕೂಡಿ ನೀನಾಗದಿದ್ದಡೆ, ಆ ನೋಟ ಕೂಟ ಏತಕ್ಕೆ ಹೇಳಾ ಅವ್ವಾ?
ನದಿಯ ನೀರು ಹೋದುವಯ್ಯಾ ಸಮುದ್ರಕ್ಕೆ ; ಸಮುದ್ರ್ ನೀರು ಬಾರವಯ್ಯಾ ನದಿಗೆ. ನಾನು ಹೋದೆನಯ್ಯಾ ಲಿಂಗದ ಕಡೆಗೆ; ಲಿಂಗ ಬಾರದು ನೋಡಯ್ಯಾ ನನ್ನ ಕಡೆಗೆ. ಮಗ ಮುನಿದಡೆ ತಂದೆ ಮುನಿಯನು; ನಾ ಮುನಿದಡೆ ನೀ ಮುನಿಯೆ ನೋಡಯ್ಯಾ, ಕಪಿಲಸಿದ್ಧಮಲ್ಲಿನಾಥಾ.
ನನ್ನ ಕೋಪವೆಂಬುದು ನಿಮ್ಮ ಕಣ್ಣು ನೋಡಯ್ಯಾ; ನಾನೇತರೊಳಗೇನು ಹೇಳಯ್ಯಾ! ನಿಮ್ಮ ಜ್ಞಾನದ ತೇಜದ ಮುಂದೆ ಎನ್ನರಿವು ಏತರದು ಹೇಳಯ್ಯಾ! ಎನ್ನ ದಿಟದ ಭಕ್ತಿ ನಿಮ್ಮ ರೂಪು ಕಂಡಯ್ಯಾ. ಎನಗೆ ಬೇರೆ ಸ್ವತಂತ್ರತೆಯುಂಟೆ, ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ನ ಒಂದರಲ್ಲಿ ವಾರ ಏಳು ನೋಡಾ. ಆ ಏಳು ವಾರಗಳೆಂಬುವುದು ಕಲ್ಪಿತವಲ್ಲದೆ ದೃಷ್ಟಿಯನ್ನಿಟ್ಟು ನೋಡಬಾರದು ನೋಡಾ. ದೇವರೆಂಬುವುದೊಂದು ನೋಡಾ. ಆ ದೇವರೆಂಬುವುದೊಂದರಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ವಿರಾಟ್ಪುರುಷರೆಂಬುವುದು; ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.