ಲಿಂಗ ಬಂದು ಲಿಂಗಗಳನಳಿಯಿತ್ತಯ್ಯ ಲಿಂಗವೆ. ಲಿಂಗ ಬಂದು ಲಿಂಗಗಳನೀಡಾಡಿತ್ತಯ್ಯ ಲಿಂಗವೆ. ಲಿಂಗ ಬಂದು ಲಿಂಗ ಉಳಿಯಿತ್ತಯ್ಯ. ಲಿಂಗವೆ ಗುರು ಲಿಂಗವೆ ಜಂಗಮ ಲಿಂಗವೆ ನಾನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
ಲಿಂಗ ಜಂಗಮ ಒಂದಾದ ಬಳಿಕ ಲಿಂಗಾರ್ಚನೆ ಸಲ್ಲದು ಜಂಗಮಕ್ಕೆ. ಲಿಂಗಾರ್ಚನೆ ಬೇಕು ಭಕ್ತಂಗೆ. ಲಿಂಗಾರ್ಚನೆ ವಿರಹಿತ ಭಕ್ತನ ಮುಖ ನೋಡಲಾಗದು, ನುಡಿಸಲಾಗದು, ಅವನ ಹೊರೆಯಲ್ಲಿರಲಾಗದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ಲಿಂಗಾರ್ಚಕನಾದ ಬಳಿಕ, ಲಿಂಗ ವಿದ್ಥಿವಿಧಾನಂಗಳನರಿದರಿದು ಮಾಡಬೇಕು. ಲಿಂಗದೇಹಿ ತಾನಾದ ಬಳಿಕ, ಅಂಗಿಗಳ ಸಂಗವಳಿದಿರಬೇಕು. ಲಿಂಗಧ್ಯಾನಿ ತಾನಾದ ಬಳಿಕ, ಅಂಗನೆಯರ ನೋಡದಿರಬೇಕು. ಲಿಂಗೈಕ್ಯ ತಾನಾದ ಬಳಿಕ, ಕರುಣಾಕರ ಅಭಯಕರ ಕಪಿಲಸಿದ್ಧಮಲ್ಲಿಕಾರ್ಜುನನ ಕಾರ್ಯದಲ್ಲಿ ಅಭೇದವಿರಬೇಕು ಕಾಣಾ, ಕೇದಾರಯ್ಯಾ.
ಲೋಕದಲ್ಲಿಹ ನೂರಾರು ಗುರುಗಳ ನೋಡಿ ನೋಡಿ ನಾನು ಬೇಸರುಗೊಂಡೆನಯ್ಯಾ. ವಿತ್ತಾಪಹಾರಿ ಗುರುಗಳು ನೂರಾರು; ಶಾಸ್ತ್ರಾರ್ಥ ಹೇಳುವ ಗುರುಗಳು ನೂರಾರು; ಮಂತ್ರತಂತ್ರದಿಂದುಭಯ ಲೋಕದಲ್ಲಿ ಸುಖದುಃಖವೀವ ಗುರುಗಳು ನೂರಾರು; ಸತ್ಕರ್ಮೋಪದೇಶವನರುಹಿ ಸ್ವರ್ಗಮತ್ರ್ಯದಲ್ಲಿ ಸುಖವೀವ ಗುರುಗಳು ನೂರಾರು; ವಿಚಾರಮುಖದಿಂದ ಷಟ್ಸಾಧನೆಯನರುಹುವ ಗುರುಗಳು ನೂರಾರು. ವಿಷಯಂಗಳೆಲ್ಲ ಮಿಥ್ಯಂಗಳೆಂದರುಹಿ ಆತ್ಮಾನುರಾಗತ್ವವನೀವ ಗುರುಗಳು ನೂರಾರು; ಶಿವಜೀವರ ಏಕತ್ವವನರುಹಿ ನಿರ್ಮಲಜ್ಞಾನವೀವ ಗುರುಗಳು ಪ್ರಮಥರು. ಸಂಶಯಾಳಿಗಳನೆಲ್ಲ ಜ್ಞಾನಾಗ್ನಿಯಿಂದ ದಹಿಸಿ ಮುಕ್ತಿಯ ಹಂಗೆಂಬುದ ಅರುಹಿನ ಬಂಧದಲ್ಲಿರಿಸಿದ ಗುರು ಚೆನ್ನಬಸವಣ್ಣನಲ್ಲದೆ ಮತ್ತೋರ್ವನ ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ಲಿಂಗವಂತರು ತಾವಾದ ಬಳಿಕ, ಅಂಗನೆಯರ ನಡೆನುಡಿಗೊಮ್ಮೆ ಲಿಂಗದ ರಾಣಿಯರೆಂದು ಭಾವಿಸಬೇಕು. ಲಿಂಗವಂತರು ತಾವಾದ ಬಳಿಕ, ಅನುಭವ ವಚನಗಳ ಹಾಡಿ ಸುಖದುಃಖಗಳಿಗಭೇದ್ಯವಾಗಿರಬೇಕು. ಲಿಂಗವಂತರು ತಾವಾದ ಬಳಿಕ, ಜಂಗಮವ ಪೂಜಿಸಿ ಸದಾ ಲಿಂಗೈಕ್ಯಸುಖಿಗಳಾಗಿರಬೇಕು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
ಲಿಂಗಪೂಜಕರಿಗೆ ಭವವುಂಟೆಂದು ಹೇಳುತ್ತಿದ್ದೇನೆ. ಬ್ರಹ್ಮ ವಿಷ್ಣಾ ್ವದಿಗಳು ಲಿಂಗಾರ್ಚನೆಯ ಮಾಡಿ ಭವಕ್ಕೆ ಬಂದುದನರಿಯಾ. ಬಸವಣ್ಣ ಮೊದಲಾದ ಪುರಾತರೆಲ್ಲ ಪ್ರಸಾದಲಿಂಗ ಗ್ರಹಿಸಿ ಸಂದಿಲ್ಲದ ಕೂಟವ ಮಾಡಿದ ಗುರು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
ಲಿಂಗವಿಚಾರ, ಜಂಗಮವಿಚಾರ, ಪಾದೋದಕವಿಚಾರ ಬಹು ಸೂಕ್ಷ ್ಮ ಕೇಳಯ್ಯಾ. ಮೊದಲನೆಯ ಪಾದೋದಕ ಗುರುಸಂಬಂಧ; ಎರಡನೆಯ ಪಾದೋದಕ ಲಿಂಗ ಸಂಬಂಧ; ಮೂರನೆಯ ಪಾದೋದಕ ಜಂಗಮ ಸಂಬಂಧ. ಈ ತ್ರಿವಿಧೋದಕ ಭಕ್ತನಲ್ಲಿ ಸಂಬಂಧ. ಈ ತ್ರಿವಿಧೋದಕ ಗುರು-ಲಿಂಗ-ಜಂಗಮದಲ್ಲಿ ಸಂಬಂಧ. ಅದು ಕಾರಣ, ಭಕ್ತ-ಮಹೇಶ-ಪಾದೋದಕ, ಪ್ರಸಾದದಲ್ಲಿ ಭೇದವ ಮಾಡಿ ನಿಂದಡೆ, ಅಘೋರನರಕದಲ್ಲಿಕ್ಕುವ ಕಪಿಲಸಿದ್ಧಮಲ್ಲಿಕಾರ್ಜುನ.
ಲೋಕ ಲೌಕಿಕಂಗಳೆಲ್ಲಾ ನೀವು ಕೇಳಿರೆ. ಏಕೈಕ ರುದ್ರನ ಅವತಾರವನರಿದೆವೆಂಬಿರಿ. ನೋಡಿ ನಚ್ಚಿರೆ ಶಿವನ. ಶಿವನು ಬಸವಣ್ಣನಾದ ನೋಡಿರೆ; ಬಸವಣ್ಣ ಗುರುವಾದ, ಬಸವಣ್ಣ ಲಿಂಗವಾದ, ಬಸವಣ್ಣ ಜಂಗಮವಾದ; ಬಸವಣ್ಣ ಪರಿಣಾಮ ಪ್ರಸನ್ನ ಪರವಾದ; ಬಸವಣ್ಣ ಮೂಲತ್ರಯವಾದ; ಬಸವಣ್ಣ ಭಕ್ತಿ ಎರಡು ತ್ರಯವಾದ; ಬಸವಣ್ಣ ಆರಾರರಿಂ ಮೇಲೆ ತೋರಿದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.